ಗೌರಿ ಲಂಕೇಶ್(29 ಜನವರಿ 1962 - 5 ಸೆಪ್ಟೆಂಬರ್ 2017) ಅವರು ಭಾರತೀಯ ಪತ್ರಕರ್ತೆ - ಸಾಮಾಜಿಕ ಕಾರ್ಯಕರ್ತೆ, ಇವರು ಬೆಂಗಳೂರು, ಕರ್ನಾಟಕದಲ್ಲಿ ನೆಲೆಸಿದ್ದರು. ಇವರು ಕನ್ನಡದಲ್ಲಿ ಲಂಕೇಶ್ ಪತ್ರಿಕೆ ಮತ್ತು ವಾರಕ್ಕೊಮ್ಮೆ "ಗೌರಿ ಲಂಕೇಶ್ ಪತ್ರಿಕೆ" ಎಂಬ ಹೆಸರಿನ ಪತ್ರಿಕೆ ನಡೆಸುತ್ತಿದ್ದರು. ಅವರು ಸೆಪ್ಟೆಂಬರ್ 5, 2017 ರಂದು ರಾಜರಾಜೇಶ್ವರಿ ನಗರ ನಲ್ಲಿರುವ ತನ್ನ ಮನೆಯ ಹೊರಗೆ ಅಜ್ಞಾತ ಆಕ್ರಮಣಕಾರರಿಂದ ಸಾವನ್ನಪ್ಪಿದರು. ಬಲಪಂಥೀಯ ಹಿಂದೂ ಉಗ್ರವಾದದ ವಿರುದ್ಧ ಮಾತನಾಡಿದ್ದಕ್ಕಾಗಿ, ಮಹಿಳಾ ಹಕ್ಕುಗಳಿಗಾಗಿ ಪ್ರಚಾರ ಮಾಡಿದ ಮತ್ತು ಜಾತಿ ಆಧಾರಿತ ತಾರತಮ್ಯವನ್ನು ವಿರೋಧಿಸಿದ್ದಕ್ಕಾಗಿ ಅವರಿಗೆ ಅನ್ನಾ ಪೊಲಿಟ್‌ಕೋವ್ಸ್ಕಯಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. == ಆರಂಭಿಕ ಜೀವನ ಮತ್ತು ವೃತ್ತಿ == 1962 ರಲ್ಲಿ ಜನಿಸಿದ ಗೌರಿ ಲಂಕೇಶ್, ಕವಿ, ಪತ್ರಕರ್ತ ಪಿ.ಲಂಕೇಶ್ ಮತ್ತು ಇಂದಿರಾ ಅವರ ಹಿರಿಯ ಮಗಳು. ಪಿ.ಲಂಕೇಶ್ ಅವರು ವಾರಕ್ಕೊಮ್ಮೆ ಪ್ರಕಟವಾಗುವ ಕನ್ನಡ ಭಾಷೆ ಟ್ಯಾಬ್ಲಾಯ್ಡ್ (ಹಳದಿ ಪತ್ರಿಕೆ) , ಲಂಕೇಶ್ ಪತ್ರಿಕೆಯನ್ನು ಸ್ಥಾಪಿಸಿದವರು. ಅವರ ಮಗಳು, ಗೌರಿ ತನ್ನ ವೃತ್ತಿಯನ್ನು ಬೆಂಗಳೂರಿನಲ್ಲಿ ದಿ ಟೈಮ್ಸ್ ಆಫ್ ಇಂಡಿಯಾದ ಪತ್ರಕರ್ತರಾಗಿ ಪ್ರಾರಂಭಿಸಿದರು. ನಂತರ, ಅವರು ತಮ್ಮ ಪತಿ ಚಿದಾನಂದ ರಾಜ್ ಘಟ್ಟರೊಂದಿಗೆ ದೆಹಲಿಗೆ ತೆರಳಿದರು. ಸ್ವಲ್ಪ ಸಮಯದ ನಂತರ, ಅವರು ಬೆಂಗಳೂರಿಗೆ ಮರಳಿ, ಒಂಬತ್ತು ವರ್ಷಗಳ ಕಾಲ ಸಂಡೇ ಪತ್ರಿಕೆಯ ವರದಿಗಾರರಾಗಿ ಕೆಲಸ ಮಾಡಿದರು. ಆಕೆಯ ತಂದೆಯ ಮರಣದ ಸಮಯದಲ್ಲಿ (2000ನೇ ಇಸವಿ), ಅವರು ದೆಹಲಿಯ ‘ಈನಾಡು’-ತೆಲುಗು ದೂರದರ್ಶನ ಚಾನಲ್ ಗಾಗಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಅವರು ಪತ್ರಕರ್ತರಾಗಿ 16 ವರ್ಷಗಳನ್ನು ಕಳೆದಿದ್ದರು. == ಲಂಕೇಶ್ ಪತ್ರಿಕೆ == ಅವರ ತಂದೆ ಪಿ. ಲಂಕೇಶ್ ಮರಣ ಹೊಂದಿದಾಗ, ಗೌರಿ ಮತ್ತು ಅವಳ ಸಹೋದರ ಇಂದ್ರಜಿತ್ ಅವರು ಲಂಕೇಶ್ ಪತ್ರಿಕೆಯ ಪ್ರಕಾಶಕ ಮಣಿಯನ್ನು ಭೇಟಿಯಾಗಿ, ಪತ್ರಿಕೆಯ ಪ್ರಕಟಣೆಯನ್ನು ನಿಲ್ಲಿಸುವ ನಿರ್ಧಾರವನ್ನು ತಿಳಿಸಿದರು. ಮಣಿಯವರು ಅವರಿಬ್ಬರ ಈ ನಿರ್ಧಾರವನ್ನು ಬದಲಿಸುವಂತೆ ಮನವೊಲಿಕೆ ಮಾಡಲು ಯಶಸ್ವಿಯಾದರು. ತದನಂತರ, ಗೌರಿ ಪತ್ರಿಕೆಯ ಸಂಪಾದಕರಾಗಿಯೂ, [ಇಂದ್ರಜಿತ್] ಅವರು ಪತ್ರಿಕಾ ಪ್ರಕಟಣೆಯ ವ್ಯವಹಾರಗಳನ್ನು ನಿರ್ವಹಿಸಿದರು. 2001ರ ಆರಂಭದಿಂದ, ಪತ್ರಿಕೆಯ ಸಿದ್ಧಾಂತದ ಬಗೆಗೆ ಗೌರಿ ಮತ್ತು ಇಂದ್ರಜಿತ್ ನಡುವೆ ಭಿನ್ನಾಭಿಪ್ರಾಯಗಳು ಬೆಳೆಯತೊಡಗಿದವು. ಫೆಬ್ರವರಿ 2005 ರಲ್ಲಿ ಗೌರಿ ಅನುಮೋದಿಸಿದ ಪೊಲೀಸರ ಮೇಲಿನ ನಕ್ಸಲ್ ದಾಳಿಗೆ ಸಂಬಂಧಿಸಿದ ಒಂದು ವರದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದಾಗ ಈ ವ್ಯತ್ಯಾಸಗಳು ಸಾರ್ವಜನಿಕವಾಗಿ ಹೊರಬಂದವು. ಫೆಬ್ರವರಿ 13 ರಂದು, ಇಂದ್ರಜಿತ್ (ಪತ್ರಿಕೆಯ ಮಾಲೀಕ ಮತ್ತು ಪ್ರಕಾಶಕರು) ನಕ್ಸಲ್ ಪರವಾದ ವರದಿಯೆಂದು ಹಿಂತೆಗೆದುಕೊಂಡರು. ಫೆಬ್ರವರಿ 14 ರಂದು, ಇಂದ್ರಜಿತ್ ಗೌರಿ ವಿರುದ್ಧ ಪೊಲೀಸ್ ದೂರು ದಾಖಲಿಸಿ, ಗೌರಿಯವರು ಪ್ರಕಟಣೆಯ ಕಛೇರಿಯಿಂದ ಕಂಪ್ಯೂಟರ್, ಪ್ರಿಂಟರ್ ಮತ್ತು ಸ್ಕ್ಯಾನರ್ಗಳನ್ನು ಕದ್ದಿದ್ದಾರೆಂದು ಆರೋಪ ಹೊರಿಸಿದರು. ಇದಕ್ಕೆ ಪ್ರತ್ಯುತ್ತರವಾಗಿ, ಗೌರಿ ಅವರು ಪ್ರತಿದೂರನ್ನು ಸಲ್ಲಿಸಿದರು. ಆ ದೂರಿನಲ್ಲಿ ಇಂದ್ರಜಿತ್ ರವರು ತಮ್ಮ ರಿವಾಲ್ವರ್ನಿಂದ ಜೀವಬೆದರಿಕೆ ಹಾಕಿದರು ಎಂದು ಆಪಾದಿಸಿದರು. ಫೆಬ್ರವರಿ 15 ರಂದು ಇಂದ್ರಜಿಯವರು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿ, ಗೌರಿರವರು ಪತ್ರಿಕೆಯ ಮೂಲಕ ನಕ್ಸಲಿಸಮ್ ಗೆ ಉತ್ತೇಜನ ನೀಡುತ್ತಿರುವವರೆಂದು ಆರೋಪಿಸಿದರು. ಗೌರಿ ಅವರು ಪ್ರತ್ಯೇಕವಾದ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿ, ಈ ಆಪಾದನೆಯನ್ನು ನಿರಾಕರಿಸಿದರು, ಮತ್ತು ಆಕೆಯ ಅವಳ ಸಾಮಾಜಿಕ ಕಾರ್ಯಚಟುವಟಿಕೆಗೆ ಸಹೋದರನ ಸಮ್ಮತಿ ಇಲ್ಲದಿರುವುದಾಗಿ ತಿಳಿಸಿದರು. ಗೌರಿ ತರುವಾಯ ತನ್ನದೇ ಆದ ಕನ್ನಡ ವಾರ ಪತ್ರಿಕೆ, ‘ಗೌರಿ ಲಂಕೇಶ್ ಪತ್ರಿಕೆ’ಯನ್ನು ಪ್ರಾರಂಭಿಸಿದರು. == ರಾಜಕೀಯ ದೃಷ್ಟಿಕೋನಗಳು ಮತ್ತು ಸಿದ್ಧಾಂತ == ಗೌರಿ ಅವರು ಬಲಪಂಥೀಯ ಹಿಂದುತ್ವ ರಾಜಕೀಯವನ್ನು ಟೀಕಿಸಿದರು. 2003 ರಲ್ಲಿ, ಅವರು ಸೂಫಿ ದೇವಾಲಯ ಬಾಬಾ ಬುಡನ್ ದರ್ಗಾವನ್ನು ಹಿಂದೂಗಳ ಗುರು ದತ್ತಾತ್ರೇಯ ಮಂದಿರವಾಗಿ ಮಾಡುವ, ಸಂಘ ಪರಿವಾರದ ಚಳುವಳಿಯನ್ನು ವಿರೋಧಿಸಿದರು. 2012 ರಲ್ಲಿ, ಮಂಗಳೂರಿನಲ್ಲಿ ಕೋಮು ಗುಂಪಿನ ಮೇಲೆ ನಿಷೇಧ ಹೇರಬೇಕೆಂದು ಪ್ರತಿಭಟನೆ ನಡೆಸಿದ ಅವರು, ಹಿಂದೂ ಧರ್ಮವು ಧಾರ್ಮಿಕ ಧರ್ಮವಲ್ಲ, "ಸಮಾಜದಲ್ಲಿ ಕ್ರಮಾನುಗತ ವ್ಯವಸ್ಥೆ" ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೇ, ಇದರಲ್ಲಿ "ಮಹಿಳೆಯರು ಎರಡನೆಯ ವರ್ಗ ಜೀವಿಗಳೆಂದು ಪರಿಗಣಿಸಲಾಗುತ್ತದೆ" ಎಂದರು. ಅವರು ಲಿಂಗಾಯತ ಸಮುದಾಯ ಅಲ್ಪಸಂಖ್ಯಾತ ಧರ್ಮದ ಸ್ಥಾನ ಪಡೆಯಲು ಬೆಂಬಲಿಸಿದರು, ಮತ್ತು ತುಳಿತಕ್ಕೊಳಗಾದ ಸಮುದಾಯಗಳಿಗೆ ಕೋಮು ಸೌಹಾರ್ದ ವೇದಿಕೆಯ ಮುಂದಾಳತ್ವ ವಹಿಸಿದರು. ತತ್ವಜ್ಞಾನಿ ಬಸವಣ್ಣ ಅನುಯಾಯಿಗಳು ಹಿಂದೂಗಳಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಪತ್ರಿಕಾ ಸ್ವಾತಂತ್ರ್ಯವನ್ನು ಸಮರ್ಥಿಸುವುದಕ್ಕಾಗಿ ಗೌರಿ ಹೆಸರುವಾಸಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಕಟ ಸಹಯೋಗಿಯಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರ ತಪ್ಪುಗಳ ಬಗ್ಗೆ ಅವರು ಬರೆದಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ)ವನ್ನು ವಿರೋಧಿಸಿದರು, ಮತ್ತು ಪ್ರಕಾಶ್ ಬೆಳವಡಿಯವರು ೨೦೧೪ರ ಚುನಾವಣೆಯಲ್ಲಿ ಭಾಜಪದ ಮಾಧ್ಯಮ ಸಲಹೆಗಾರರಾದಾಗ, ಅವರ ಜೊತೆಗಿನ 35 ವರ್ಷದ ಸ್ನೇಹವನ್ನು ಗೌರಿ ಮುರಿದರು. ನವೆಂಬರ್ 2014 ರಲ್ಲಿ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಹಿಂಸೆಯನ್ನು ತ್ಯಜಿಸಿ ಶರಣಾಗುವಂತೆ ನಕ್ಸಲೀಯರ ಮನವೊಲಿಸುವ ಉದ್ದೇಶದಿಂದ ರಚಿಸಿದ ಸಮಿತಿಯ ಸದಸ್ಯರಾಗಿ ಗೌರಿಯವರನ್ನು ನೇಮಿಸಿತು.ಬಿಜೆಪಿ ನಾಯಕರ ನಿಯೋಗ ಅವರು ನಕ್ಸಲ್ ಅನುಯಾಯಿಗಳ ಬಗೆಗೆ ಸಹಾನುಭೂತಿಯುಳ್ಳವರಾಗಿದ್ದಾರೆ ಎಂದು ಆರೋಪಿಸಿ ಸಮಿತಿಯಿಂದ ಅವರನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದರು. ಆದಾಗ್ಯೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬೇಡಿಕೆಯನ್ನು ತಿರಸ್ಕರಿಸಿದರು. ಅವರು ಜಾತಿ ಪದ್ಧತಿಯನ್ನು ಬಹಿರಂಗವಾಗಿ ಟೀಕಿಸಿದರು. 2015 ರ ಶ್ರವಣಬೆಳಗೊಳದಲ್ಲಿ ನಡೆದ 81 ನೇ ಕನ್ನಡ ಸಾಹಿತ್ಯ ಸಮ್ಮೇಳನ (ಕನ್ನಡ ಸಾಹಿತ್ಯ ಸಮ್ಮೇಳನ) ಸಮಯದಲ್ಲಿ, ಗೌರಿ ಕೆಳ-ಜಾತಿ ಲೇಖಕ ಪೆರುಮಾಳ್ ಮುರುಗನ್ ಅವರನ್ನು ಮಕ್ಕಳನ್ನು ಹೊಂದಲು ಮದುವೆ ಹೊರಗೆ ಒಮ್ಮತದ ಲೈಂಗಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವ ಮಕ್ಕಳಿಲ್ಲದ ಹಿಂದೂ ದಂಪತಿಗಳನ್ನು ಚಿತ್ರಿಸಿರುವುದನ್ನು ಬಲಪಂಥೀಯ ಹಿಂದೂ ಗುಂಪುಗಳು ಟೀಕಿಸಿರುವುದನ್ನು ಟೀಕಿಸಿದ್ದಾರೆ. ಬ್ರಾಹ್ಮಣ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರು ಕೂಡಾ ಹಿಂದೂ ಮಹಾಕಾವ್ಯ ಮಹಾಭಾರತದ ಕಥೆಯನ್ನು ಪುನಃ ಹೊಸದಾಗಿ ಹೇಳುವ ಪರ್ವ ಎಂಬ ಕಾದಂಬರಿಯಲ್ಲಿ ಇದೇ ರೀತಿಯ ನಿಯೋಗ ಆಚರಣೆಯನ್ನು ಚಿತ್ರಿಸಿದ್ದಾರೆ ಎಂದು ಅವರು ಗಮನಸೆಳೆದರು. ಈ ಇಬ್ಬರೂ ಬರಹಗಾರರನ್ನು ತಾನು ಬೆಂಬಲಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು. ಪೆರುಮಾಳ್ ಮುರುಗನ್ ರಿಂದ ಉಲ್ಲಂಘಿಸಲ್ಪಟ್ಟಿರುವ ನೀತಿಯನ್ನು ಹಿಂದೂ ಗುಂಪುಗಳು ಟೀಕಿಸಿದ್ದು, ಭೈರಪ್ಪನವರನ್ನು ಏಕೆ ಟೀಕಿಸಲಿಲ್ಲ ಎಂದು ಪ್ರಶ್ನಿಸಿದರು. 19 ಫೆಬ್ರವರಿ 2015 ರಂದು ಹಾಸನ ಜಿಲ್ಲಾ ಬ್ರಾಹ್ಮಣ ಸಭೆಯಿಂದ ("ಹಾಸನ ಜಿಲ್ಲೆ ಬ್ರಾಹ್ಮಣ ಅಸೋಸಿಯೇಷನ್ ") ಅವಳ ವಿರುದ್ಧ ಒಂದು ರ್ಯಾಲಿಯನ್ನು ಸಂಘಟಿಸಿ, ಅವಳ ವಿರುದ್ಧ ಮೊದಲ ಮಾಹಿತಿ ವರದಿಯ() ಮೊಕದ್ದಮೆ ನೋಂದಾಯಿಸಲು ಪೊಲೀಸರಲ್ಲಿ ಒತ್ತಾಯಿಸಿದರು. == 2016 ರಲ್ಲಿ ಮಾನನಷ್ಟ ಮೊಕದ್ದಮೆ ಮತ್ತು ಶಿಕ್ಷೆ == 2008 ರ ಜನವರಿ 23 ರಂದು ಗೌರಿ ತಮ್ಮ ಟ್ಯಾಬ್ಲಾಯ್ಡ್ನಲ್ಲಿ ‘ದರೋಡೆಗಿಳಿದ ಬಿಜೆಪಿಗಳು’ ಎಂಬ ಲೇಖನವನ್ನು ಪ್ರಕಟಿಸಿದರು. ಬಿಜೆಪಿ ನಾಯಕರು ಪ್ರಹ್ಲಾದ ಜೋಷಿ, ಉಮೇಶ್ ದುಶಿ, ಶಿವಾನಂದ ಭಟ್ ಮತ್ತು ವೆಂಕಟೇಶ್ ಮೆಏಸ್ಟ್ರಿ ಅವರನ್ನು ಟೀಕಿಸಿದರು. ಮೂರು ಬಿಜೆಪಿ ಕಾರ್ಯಕರ್ತರು ಆಭರಣ ವರ್ತಕನನ್ನು ರೂಪಾಯಿ 100,000/- ವಂಚಿಸಿದ್ದಾರೆಂದು ಲೇಖನವು ಹೇಳಿದೆ. ಅವರು ಸಂಸತ್ ಸದಸ್ಯ ಜೋಶಿ ಅವರಿಂದ ಸಹಾಯ ಕೇಳಿದರು ಮತ್ತು ಪೊಲೀಸರನ್ನು ಸಂಪರ್ಕಿಸುವುದಾಗಿ ಬೆದರಿಕೆ ಹಾಕಿದರು. ಗೌರಿ ನಂತರ ಈ ಲೇಖನ "ಬಿಜೆಪಿಯ ಒಳಗಿನ ಮೂಲಗಳನ್ನು" ಆಧರಿಸಿದೆ ಎಂದು ಹೇಳಿದ್ದಾರೆ. ಜೋಶಿ ಮತ್ತು ದುಶಿ ಗೌರಿ ವಿರುದ್ಧ ಪ್ರತ್ಯೇಕ ಮಾನನಷ್ಟ ಮೊಕದ್ದಮೆಯನ್ನು ಹೂಡಿದರು. ದುಶಿಯವರ ಪ್ರಕರಣದಲ್ಲಿ, ಅವರು ಲೇಖಕ ಬರಹಗಾರರಾದ ದೇವನಂದ್ ಜಗಾಪೂರ್ರೊಂದಿಗೆ ಸಹ-ಆರೋಪಿಸಲ್ಪಟ್ಟಿದ್ದರು. ಆರೋಪಗಳನ್ನು ಪ್ರಕಟಿಸಿದ ಇತರ ಸ್ಥಳೀಯ ದಿನಪತ್ರಿಕೆಗಳನ್ನು ಬಿಜೆಪಿ ನಾಯಕರು ಮೊಕದ್ದಮೆಗೆ ಒಳಪಡಿಸದ ಕಾರಣ, ಅವರು ಎಡ-ಪಕ್ಷೀಯ ರಾಜಕೀಯ ದೃಷ್ಟಿಕೋನಗಳಿಗೆ ವಿರೋಧಿ ಗಳಾಗಿದ್ದು ತಮ್ಮನ್ನು ಗುರಿಯಾಗಿಸಿದ್ದಾರೆ ಎಂದು ಗೌರಿ ಆರೋಪಿಸಿದರು.ಗೌರಿ ಅವರ ವಿರುದ್ಧ ಪ್ರಕರಣವನ್ನು ವಜಾ ಮಾಡಲು ಕೋರಿ ಹೈಕೋರ್ಟ್ ಗೆ ತೆರಳಿದರು. ಆದಾಗ್ಯೂ, 2016 ರಲ್ಲಿ, ಹೈಕೋರ್ಟ್ ಈ ಪ್ರಕರಣವನ್ನು ವಜಾಗೊಳಿಸಲು ನಿರಾಕರಿಸಿತು ಮತ್ತು ವಿಚಾರಣೆಯನ್ನು ಕೆಳ ನ್ಯಾಯಾಲಯದಲ್ಲಿ ಮುಂದುವರಿಸಬೇಕೆಂದು ಕೇಳಿತು. ಪ್ರಕರಣದಲ್ಲಿ ಹೈಕೋರ್ಟ್ ನಾಲ್ಕು ವಾರದ ತಡೆ ನೀಡಿತು, ಆರು ತಿಂಗಳುಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಲು ಕೆಳ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು. ಅಕ್ಟೋಬರ್ 2016 ರಲ್ಲಿ,ಹುಬ್ಬಳ್ಳಿಯಲ್ಲಿರುವ ಎರಡನೇ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಫಸ್ಟ್ ಕ್ಲಾಸ್ (ಜೆಎಂಎಫ್) ನ್ಯಾಯಾಲಯವು ಗೌರಿಗೆ ಬಂಧನ ವಾರಂಟ್ ನೀಡಿತು, ಅವರು ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ನಂತರ ಮತ್ತು ಹಿಂದಿನ ವಾರಂಟ್ಗಳಿಗೆ ಸ್ಪಂದಿಸಲಿಲ್ಲ. ಪೊಲೀಸರು ಅವಳನ್ನು ಬಂಧಿಸಿ ಅಕ್ಟೋಬರ್ 1, 2016 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. 25,000 ವೈಯಕ್ತಿಕ ಬಾಂಡ್ ನ್ನು ನೀಡಿದ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. 2016 ರ ನವೆಂಬರ್ 27 ರಂದು, ಎರಡನೇ ಜೆಎಂಎಫ್ಸಿ ನ್ಯಾಯಾಲಯವು ಬಿಜೆಪಿ ನಾಯಕರ ಟೀಕೆಗೆ ಯಾವುದೇ ಮಹತ್ವದ ಸಾಕ್ಷ್ಯವನ್ನು ನೀಡಲು ವಿಫಲವಾಗಿದೆ ಎಂದು ತೀರ್ಮಾನಿಸಿತು, ಮತ್ತು ಮಾನನಷ್ಟ ಅಪರಾಧಿಯೆಂದು ಅವರು ಕಂಡು ಕೊಂಡರು. ಪ್ರತಿ ಪ್ರಕರಣದಲ್ಲಿ ನ್ಯಾಯಾಲಯವು 5,000 ದಂಡವನ್ನು ವಿಧಿಸಿದೆ. ಒಟ್ಟು ರೂ.10,000 ದಂಡವನ್ನು ಅಲ್ಲದೆ, ನ್ಯಾಯಾಲಯವು ಆರು ತಿಂಗಳ ಸೆರೆವಾಸಕ್ಕೆ ಸಹ ಶಿಕ್ಷೆ ವಿಧಿಸಿತು. ಅವರ ಸಹ-ಆರೋಪಿತ ದೇವಾನಂದ್ ಜಗಪುರ್ ಅದೇ ನ್ಯಾಯಾಲಯದಿಂದ ತಪ್ಪಿತಸ್ಥರಲ್ಲವೆಂದು ತೀರ್ಪು ನೀಡಿತು. ಅದೇ ನ್ಯಾಯಾಲಯವು ಅವರಿಗೆ ನಿರೀಕ್ಷಣಾ ಜಾಮೀನು ನೀಡಿತು, ಹೀಗೆ ಜೈಲುವಾಸ ತಪ್ಪಿತು. ಬಿಜೆಪಿ ಮುಖಂಡರು ಆಭರಣ ವ್ಯಾಪಾರಿಯೊಂದಿಗೆ ರಾಜಿ ಮಾಡಿಕೊಳ್ಳುವುದರ ಮೂಲಕ ತಮ್ಮ ತಪ್ಪುಗಳನ್ನು ಮರೆಮಾಡಲು ಸಮರ್ಥರಾಗಿದ್ದರು. ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಗೆ ತನ್ನ ಮೂಲವನ್ನು ಬಹಿರಂಗಪಡಿಸಲು ನಿರಾಕರಿಸಿದರು ಎಂದು ಗೌರಿ ಹೇಳಿದರು. ನ್ಯಾಯಾಲಯದ ತೀರ್ಪನ್ನು ತಾತ್ಕಾಲಿಕ ಹಿನ್ನಡೆ ಎಂದು ಅವರು ವಿವರಿಸಿದರು, ಇದು ಉನ್ನತ ನ್ಯಾಯಾಲಯದಲ್ಲಿ ಅದನ್ನು ಸವಾಲು ಮಾಡುತ್ತದೆ. == ಮರಣ == 5 ಸೆಪ್ಟೆಂಬರ್ 2017ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿನ ಅವರ ಮನೆಯ ಮುಂದೆ ಅಪರಿಚಿತ ವ್ಯಕ್ತಿಗಳು ಗುಂಡು ಹೊಡೆದು ಕೊಲೆ ಮಾಡಿದರು. ಗೌರಿ ಲಂಕೇಶ್ ಇಚ್ಛೆಯಂತೆ ಅವರ ಕಣ್ಣುಗಳನ್ನು ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ದಾನ ಮಾಡಲಾಗಿದೆ. === ಅಂತ್ಯ ಕ್ರಿಯೆ === . ಚಾಮರಾಜ ಪೇಟೆಯಲ್ಲಿರುವ ಲಿಂಗಾಯತ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.</> === ಹತ್ಯೆಯ ವಿವರ === ಹಿರಿಯ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿಲಂಕೇಶ್ (55)ಬಸವನಗುಡಿಯಲ್ಲಿರುವ ತಮ್ಮ ಕಚೇರಿಯಿಂದ 7.45ರ ಸುಮಾರಿಗೆ ಮನೆ ಹತ್ತಿರ ಹೋಗಿದ್ದರು. ಗೌರಿಲಂಕೇಶ್ ಅವರತ್ತ ದುಷ್ಕರ್ಮಿಗಳು 14 ಸುತ್ತು ಗುಂಡು ಹಾರಿಸಿರುವುದು ಪೊಲೀಸ್ ತನಿಖೆಯಿಂದ ಪತ್ತೆಯಾಗಿದೆ.ದಿ.೬-೯-೨೦೧೭ ಬುಧವಾರ ರಾತ್ರಿ 12.45ರ ಸುಮಾರಿಗೆ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಅದರ ಪ್ರಕಾರ 7.65 ಪಿಸ್ತೂಲಿನಿಂದ ಹಾರಿಸಿರುವ 14 ಗುಂಡುಗಳಲ್ಲಿ, ಮೂರು ಗೌರಿ ಅವರ ದೇಹವನ್ನು ಹೊಕ್ಕರೆ, ಇನ್ನುಳಿದವು ಮನೆಯ ಗೋಡೆ, ಹೂವಿನ ಕುಂಡ ಹಾಗೂ ಕಾಂಪೌಂಡ್‌ಗೆ ಬಿದ್ದಿವೆ. 30ಸೆಕೆಂಡ್‌‍ನ ದೃಶ್ಯದಲ್ಲಿ ಗೌರಿ ಹತ್ಯೆಯ ದೃಶ್ಯಗಳು ಅವರ ಮನೆಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆ ಸುಳಿವು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಚಿತ್ರ ಅಸ್ಪಷ್ಟವಾಗಿದೆ. ‘ಜರ್ಕಿನ್, ಬ್ಯಾಗ್ ಹಾಗೂ ಕಪ್ಪು ಬಣ್ಣದ ಹೆಲ್ಮೆಟ್ ಧರಿಸಿದ್ದ ಸುಮಾರು 5.3 ಅಡಿ ಎತ್ತರದ 28 ವರ್ಷದ ಯುವಕನೊಬ್ಬ, ಗೇಟ್ ಮೂಲಕ ಮನೆಯೊಳಗೆ ಬಂದಿರುವ ಹಾಗೂ ಗುಂಡಿನ ದಾಳಿ ನಡೆಸಿರುವ ದೃಶ್ಯಗಳು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿವೆ. ಆದರೆ, ಅದರ ಗುಣಮಟ್ಟ ಸರಿಯಿಲ್ಲ. === ಸಿಸಿ ಟಿವಿ ದೃಶ್ಯದ ವಿವರ === ರಾತ್ರಿ 7.45ಕ್ಕೆ ಮನೆ ಹತ್ತಿರ ಬರುವ ಗೌರಿ, ಹೊರಗೆ ಕಾರು ನಿಲ್ಲಿಸಿ ಕೆಳಗಿಳಿಯುತ್ತಾರೆ. ಆ ನಂತರ ಗೇಟ್ ತೆಗೆದು ಒಳಗೆ ಹೋಗಿ, ಮನೆ ಬೀಗ ತೆಗೆಯಲು ಮುಂದಾಗುತ್ತಾರೆ. ಇದೇ ಸಮಯದಲ್ಲಿ ಆಗಂತುಕನೊಬ್ಬ ಗೇಟ್ ಬಳಿ ಬಂದು ನಿಲ್ಲುತ್ತಾನೆ. ಅಪರಿಚಿತನನ್ನು ಕಂಡ ಕೂಡಲೇ ಗೌರಿ ಅವರು ಬೀಗ ತೆಗೆಯುವುದನ್ನು ಬಿಟ್ಟು ವಿಚಾರಿಸಲು ವಾಪಸ್ ಬರುತ್ತಾರೆ. ಈ ವೇಳೆ ಅವನು ಬ್ಯಾಗ್‌ನಿಂದ ಪಿಸ್ತೂಲ್ ತೆಗೆಯುತ್ತಾನೆ. ಇದರಿಂದ ಹೆದರಿ ತಕ್ಷಣ ಅವರು ಮನೆ ಬಾಗಿಲಿನತ್ತ ಓಡುತ್ತಾರೆ. ಈ ಹಂತದಲ್ಲಿ ಹಂತಕ ಗೇಟ್ ಹತ್ತಿರ ನಿಂತುಕೊಂಡೇ ಮನಸೋಇಚ್ಛೆ ಗುಂಡಿನ ಮಳೆಗರೆಯುತ್ತಾನೆ. ಮೊದಲು ಹಾರಿಸಿದ ಗುಂಡುಗಳು ಮನೆ ಗೋಡೆ ಹಾಗೂ ಕಾಂಪೌಂಡ್‌ಗೆ ಬೀಳುತ್ತವೆ. ತಕ್ಷಣ ಅವರ ಹತ್ತಿರ ಓಡುವ ಆತ, ಎರಡು ಮೀಟರ್ ಅಂತರದಲ್ಲಿ ನಿಂತು ಎದೆಗೆ ಎರಡು ಗುಂಡುಗಳನ್ನು ಹೊಡೆಯುತ್ತಾನೆ. ಇದರಿಂದ ಅವರು ಕುಸಿದು ಬೀಳುತ್ತಾರೆ. ಆಗ ವಾಪಸ್ ಹೊರಡುವ ಆತ, ಅವರತ್ತ ತಿರುಗಿ ಮತ್ತೊಂದು ಗುಂಡು ಹೊಡೆಯುತ್ತಾನೆ. ಅದು ಕಿಬ್ಬೊಟ್ಟೆಯನ್ನು ಹೊಕ್ಕುತ್ತದೆ. ನಂತರ ಗೇಟ್ ಮೂಲಕವೇ ಹೊರಗೆ ಓಡುತ್ತಾನೆ. ಹೀಗೆ, ಕೇವಲ 30 ಸೆಕೆಂಡ್‌ಗಳಲ್ಲಿ ಅವರ ಹತ್ಯೆ ನಡೆದು ಹೋಗುತ್ತದೆ. === ತನಿಖೆ === ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್‌ ಹತ್ಯೆ ತನಿಖೆಗೆ ಗುಪ್ತದಳದ ಇನ್‌ಸ್ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ಬಿ.ಕೆ. ಸಿಂಗ್‌ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. === ದೋಷಾರೋಪಪಟ್ಟಿ ಸಲ್ಲಿಕೆ === ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಎಸ್.ಐ.ಟಿ. ನ್ಯಾಯಾಲಯಕ್ಕೆ ದಿ ೩೦-೫-೨೦೧೮ ಬುಧವಾರ 651 ಪುಟಗಳ ದೋಷಾರೋಪಪಟ್ಟಿ ಸಲ್ಲಿಸಿದೆ.ಯಾವುದೇ ಸಂಘಟನೆಯ ಪಾತ್ರದ ಬಗ್ಗೆ ಅದರಲ್ಲಿ ಉಲ್ಲೇಖಿಸಿಲ್ಲ. ಬಂಧನದಲ್ಲಿರುವ ಆರೋಪಿ‘ಹಿಂದೂ ಯುವ ಸೇನೆ ಮುಖಂಡ ಕೆ.ಟಿ.ನವೀನ್‌ಕುಮಾರ್ ಕೃತ್ಯದಲ್ಲಿ ನೇರವಾಗಿ ಭಾಗಿಯಾಗದಿದ್ದರೂ, ಹಂತಕರಿಗೆ ಆಶ್ರಯ ನೀಡಿದ್ದಾನೆ. ಗೌರಿ ಅವರ ಮನೆ ಹಾಗೂ ಕಚೇರಿಯನ್ನು ಅವರಿಗೆ ತೋರಿಸಿದ್ದಾನೆ. ಹಂತಕರ ಬಗ್ಗೆ ಪೂರ್ಣ ಮಾಹಿತಿ ಗೊತ್ತಿದ್ದರೂ, ವಿಚಾರಣೆಗೆ ಸಹಕರಿಸದೆ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾನೆ. ಸತ್ಯ ಬಯಲಾಗುತ್ತದೆ ಎಂಬ ಕಾರಣಕ್ಕೆ ಮಂಪರು ಪರೀಕ್ಷೆಯನ್ನೂ ನಿರಾಕರಿಸಿದ್ದಾನೆ’ ಎಂದು ಅಧಿಕಾರಿಗಳು ಆರೋಪಪಟ್ಟಿಯಲ್ಲಿ ಹೇಳಿದ್ದಾರೆ. ಶಿಕಾರಿಪುರದ ಕಪ್ಪನಹಳ್ಳಿ ಗ್ರಾಮದ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ (37), ಮಹಾರಾಷ್ಟ್ರದ ಅಮೋಲ್ ಕಾಳೆ ಅಲಿಯಾಸ್ ಬಾಯ್‌ಸಾಬ್, ಅಮಿತ್ ದೇಗ್ವೇಕರ್ ಅಲಿಯಾಸ್ ಪ್ರದೀಪ (38) ಹಾಗೂ ವಿಜಯಪುರ ಜಿಲ್ಲೆ ರತ್ನಾಪುರ ಗ್ರಾಮದ ಮನೋಹರ್ ದುಂಡಪ್ಪ ಯಡವೆ ಅಲಿಯಾಸ್ ಮನೋಜ್ (29) ಎಂಬುವವರನ್ನು ಗೌರಿ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದರು. ಮೇ 31ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ 10 ದಿನಗಳವರೆಗೆ ಕಸ್ಟಡಿಗೆ ಪಡೆದಿದ್ದರು. ಪುನಃ ೧೧ ಜೂನ್ ೨೦೧೮ ರಂದು ನ್ಯಾಯಾಲಯ ಇನ್ನೂ ನಾಲ್ಕುದಿನ ಹೆಚ್ಚು ಪೊಲಿಸರ ವಶಕ್ಕೆ ಒಪ್ಪಿಸಿದೆ. === ಎಸ್‌ಐಟಿ ಎದುರು ಕೊಲೆ ತಪ್ಪೊಪ್ಪಗೆ === ಪರಶುರಾಮ ವಾಘ್ಮೋರೆಯು ಗೌರಿ ಲಂಕೇಶ್ ಅವರಿಗೆ ಗುಂಡು ಹೊಡೆದದ್ದು ತಾನೇ ಎಂದು ಎಸ್‌ಐಟಿ ಪತ್ತೇದಾರರ ತಂಡಕ್ಕೆ ವಿವರ ಹೇಳಿಕೆ ನೀಡಿ ಒಪ್ಪಿಕೊಂಡಿದ್ದಾನೆ. ಹತ್ಯೆಯ ಪ್ರತ್ಯಕ್ಷದರ್ಶಿ ಗಳಾದ ಪತ್ರಿಕೋದ್ಯಮ ವಿದ್ಯಾರ್ಥಿ ಹಾಗೂ ಕೂಲಿ ಕಾರ್ಮಿಕನೊಬ್ಬ ಎಸ್‌ಐಟಿ ಅಧಿಕಾರಿಗಳಿಗೆ ಗರುತಿಸಿ ಹೇಳಿಕೆ ನೀಡಿದರು. ಪರಶುರಾಮ ವಾಘ್ಮೋರೆಯ ಜೊತೆಯವನ ಪತ್ತೆ ಆಗಿಲ್ಲ. ಆದರೆ ನ್ಯಾಯಾಲಯದಲ್ಲಿ ಕೊಲೆ ರುಜುವಾತಿಗೆ ಇನ್ನೂ ಆಧಾರಗಳು ಬೇಕು ಎಂಬುದು ಎಸ್‌ಐಟಿ ಪತ್ತೇದಾರರ ಅಭಿಪ್ರಾಯ. == ವೈಯಕ್ತಿಕ ಜೀವನ == ಗೌರಿ ಮತ್ತು ಚಿದಾನಂದ್ ರಾಜ್ಘಟ್ಟಾ ಐದು ವರ್ಷಗಳ ಮದುವೆಯ ನಂತರ ವಿಚ್ಛೇದನೆ ಪಡೆದರು; ಇವರು ಪ್ರತ್ಯೇಕತೆಯ ನಂತರ ಒಬ್ಬಂಟಿಯಾಗಿಯೇ ಇದ್ದರು.ಇವರು ಏಕಾಂಗಿಯಾಗಿ ವಾಸಿಸುತ್ತಿದ್ದರೂ ಮತ್ತು ಮಕ್ಕಳಿಲ್ಲದಿದ್ದರೂ, ಗೌರಿ ಕಾರ್ಯಕರ್ತರಾದ ಜಿಗ್ನೇಶ್ ಮೆವಾನಿ, ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಮತ್ತು ಶೆಹ್ಲಾ ರಶೀದ್ ಶೋರಾ ಅವರನ್ನು ತನ್ನ "ದತ್ತು ಮಕ್ಕಳು" ಎಂದು ಪರಿಗಣಿಸಿದ್ದಾರೆ . == ಫ್ರಾನ್ಸ್ ವರದಿಗಾರರ ಪ್ರಶಸ್ತಿ == ಕರ್ತವ್ಯನಿರತರಾಗಿದ್ದಾಗ ಹತ್ಯೆಗೊಳಗಾದ ವರದಿಗಾರರಿಗೆ ನೀಡಲಾಗುವ ಫ್ರಾನ್ಸ್‌ನ ಬೇಯಾಕ್ಸ್‌ –ಕಲ್ವಾಡೋಸ್‌ ಪ್ರಶಸ್ತಿಯನ್ನು ಪತ್ರಕರ್ತೆ ಗೌರಿ ಲಂಕೇಶ್‌ ಅವರಿಗೆ ಘೋಷಿಸಲಾಗಿದೆ. ಈ ಪ್ರಶಸ್ತಿಯನ್ನು ಯುದ್ಧ ವರದಿಗಳನ್ನು ಮಾಡುವ ವರದಿಗಾರರಿಗೆ ಫ್ರಾನ್ಸ್‌ನಲ್ಲಿ ನೀಡಲಾಗುತ್ತದೆ.ಗೌರಿ ಲಂಕೇಶ್‌ಗೆ ಫ್ರಾನ್ಸ್‌ ಪ್ರಶಸ್ತಿ; 05 ಸೆಪ್ಟೆಂಬರ್ 2018 == ಇವನ್ನೂ ನೋಡಿ == ಪಿ.ಲಂಕೇಶ್ == ತನಿಖೆಯ ಬೆಳವಣಿಗೆ ಮತ್ತು ಹೆಚ್ಚಿನ ಮಾಹಿತಿ == == ಉಲ್ಲೇಖಗಳು ==